ನವದೆಹಲಿ:ಕಾಂಗ್ರೆಸ್ ಹೈಕಮಾಂಡ್ ಅನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಇಂದು ರಸ್ತೆಗಿಳಿದಿಲ್ಲ ಹಾಗೂ ಪಕ್ಷದ ಹೈ ಕಮಾಂಡ್ CAA-NCR ವಿರುದ್ಧ ಸಾಮಾನ್ಯ ಜನರು ನಡೆಸುತ್ತಿರುವ ಹೋರಾಟದಲ್ಲಿ ಅನುಪಸ್ಥಿತವಾಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯದಲ್ಲಿ NCR ಜಾರಿಗೆ ವಿರೋಧಿಸುತ್ತಿರುವ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೈಜೋಡಿಸಲು ಹೇಳಿ. ಇಲ್ಲದಿದ್ದರೆ, ಇಂತಹ ಯಾವುದೇ ಸಂದೇಶಗಳಿಗೆ ಅರ್ಥವಿರುವುದಿಲ್ಲ ಎಂದು ಅವರು ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ. ಏತಮಧ್ಯೆ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಶುಕ್ರವಾರ ತಮ್ಮ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಸಂದೇಶ ಜಾರಿಗೊಳಿಸಿ, "ಕೇಂದ್ರ ಸರ್ಕಾರ ಜನಸಾಮಾನ್ಯರ ಬೇಡಿಕೆಯನ್ನು ಹತ್ತಿಕ್ಕುತ್ತಿದ್ದು, ಕಾಂಗ್ರೆಸ್ ಪಕ್ಷ ಪ್ರತಿಭಟನಾಕಾರರಿಗೆ ಸಾಥ್ ನೀಡಲಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ವಾದಮಂಡಿಸುವ ಹಕ್ಕು ಇದ್ದು, ಸರ್ಕಾರ ಜನಸಾಮಾನ್ಯರನ್ನು ಹತ್ತಿಕ್ಕಲು ತನ್ನ ಶಕ್ತಿ ವಿನಿಯೋಗಿಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಾಕಷ್ಟು ಭೇದಭಾವಗಳಿಂದ ಕೂಡಿದ್ದು, ನೋಟು ಅಮಾನ್ಯಿಕರಣದ ರೀತಿಯಲ್ಲಿ ಮತ್ತೊಮ್ಮೆ ಪ್ರತಿಯೊಬ್ಬ ವ್ಯಕ್ತಿ ತನ್ನ ಹಾಗೂ ತನ್ನ ಪೂರ್ವಜರ ಪೌರತ್ವ ಸಾಬೀತುಪಡಿಸಲು ಲೈನ್ ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಲಿದೆ" ಎಂದಿದ್ದರು.
Congress is not on streets and its top leadership has been largely absent in the citizens’ fight against CAA-NRC
The least party could do it to make ALL Congress CMs join other CMs who have said that they will not allow NRC in their states. Or else these statements means nothing https://t.co/EWJLyc3kgR
— Prashant Kishor (@PrashantKishor) December 21, 2019
ಇನ್ನೊಂದೆಡೆ ಇತ್ತ ಜೆಡಿಯು ಉಪಾಧ್ಯಕ್ಷರಾಗಿರುವ ಪ್ರಶಾಂತ್ ಕಿಶೋರ್ ಕೂಡ ಸತತವಾಗಿ NRC ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಈ ಮೊದಲು ಕೂಡ ಟ್ವೀಟ್ ಮಾಡಿದ್ದ ಅವರು ಬಿಜೆಪಿರಹಿತ ಶಾಸನವಿರುವ ರಾಜ್ಯಗಳು ದೇಶವನ್ನು ಉಳಿಸಲು ಮುಂದಾಗಬೇಕು ಎಂಬ ಮನವಿ ಮಾಡಿದ್ದರು. ಪಂಜಾಬ್, ಕೇರಳ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಗೊಳಿಸಿದ್ದು, ಉಳಿದ ರಾಜ್ಯಗಳೂ ಕೂಡ ತಮ್ಮ ನಿಲುವು ಸ್ಪಷ್ಟಗೊಳಿಸಬೇಕು ಎಂದಿದ್ದಾರೆ. ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಜಯ ದಾಖಲಿಸಿದ್ದು ಇಲ್ಲಿ ಉಲ್ಲೇಖನೀಯ.