ನವದೆಹಲಿ: ಲೋಕಸಭಾ ಚುನಾವಣೆ 2019ರ ಕಡೆಯ ಹಂತದ ಮತದಾನಕ್ಕೆ ಎರಡೇ ದಿನ ಉಳಿದಿರುವ ಬೆನ್ನಲ್ಲೇ ಕಾಂಗ್ರೆಸ್ ಶಾಸಕರೊಬ್ಬರು ತನ್ನದೇ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ಹೇಳಿಕೆಗಳನ್ನು ನಿಡುವ ಮೂಲಕ ಪಕ್ಷವನ್ನು ತೀವ್ರ ಮುಜುಗರ ಉಂಟುಮಾಡಿದ್ದಾರೆ.
ಕಾಂಗ್ರೆಸ್ ನಾಯಕಿ ಹಾಗೂ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಬಗ್ಗೆ ಅವರದ್ದೇ ಪಕ್ಷದ ಹರ್ಚಂದ್ಪುರ್ ಶಾಸಕ ರಾಕೇಶ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಚಂದ್ಪುರ್ ಶಾಸಕ ರಾಕೇಶ್ ಸಿಂಗ್ ಸಹೋದರರಾದ ಬಿಜೆಪಿ ನಾಯಕ ದಿನೇಶ್ ಸಿಂಗ್ ಮತ್ತು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಅವದೇಶ್ ಪ್ರತಾಪ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲೇ ಪ್ರಿಯಾಂಕಾ ಗಾಂಧಿ ವಿರುದ್ಧ ಕಿಡಿ ಕಾರಿರುವ ಹರ್ಚಂದ್ಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್, ಪ್ರಿಯಾಂಕಾ ಗಾಂಧಿ ಅವರು ಕ್ರಿಮಿನಲ್ ಗಳನ್ನು ಬೆಂಬಲಿಸಿ, ಪ್ರಾಮಾಣಿಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಮೂಲಕ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಮತ್ತು ಪದಾಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
"ಇತರರ ಮೇಲೆ ಒತ್ತಡ ಹೀರುವ ಮೂಲಕ ಕೆಲಸ ಸಾಧಿಸಬಹುದು ಎಂದು ಪ್ರಿಯಾಂಕಾ ಗಾಂಧಿ ತಿಳಿದಿದ್ದಾರೆ. ನನ್ನ ಸಹೋದರರ ಮೇಲೆ ವೃಥಾ ಆರೋಪ ಹೊರಿಸುತ್ತಿದ್ದಾರೆ. ನನಗೆ ತಿಳಿದಿರುವಂತೆ ಪ್ರಿಯಾಂಕಾ ಗಾಂಧಿ ಅವರು ಕ್ರಿಮಿನಲ್ ಗಳಿಗೆ ದೀರ್ಘಸಮಯದವರೆಗೆ ಆಶ್ರಯ ನೀಡಿದ್ದಾರೆ. ಈ ಇಡೀ ಪ್ರಕರಣದ ಹಿಂದೆ ಪ್ರಿಯಾಂಕ ಗಾಂಧಿ ಪಿತೂರಿ ಇದೆ" ಎಂದು ಆರೋಪಿಸಿರುವ ರಾಕೇಶ್ ಸಿಂಗ್ ಈ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯಬೇಕು ಎಂದಿದ್ದಾರೆ.