ಬೆಂಗಳೂರು: ಸೋಮವಾರದಂದು ನಿಧನರಾದ ಹಿರಿಯ ಪತ್ರಕರ್ತ,ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಪಾಟೀಲ್ ಪುಟ್ಟಪ್ಪನವರ ನಿಧನಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸುನೀಲ್ ಜೋಶಿ ಕಂಬನಿ ಮಿಡಿದಿದ್ದಾರೆ.
ಕನ್ನಡದಲ್ಲಿ ಟ್ವೀಟ್ ಮಾಡಿರುವ ಸುನಿಲ್ ಜೋಶಿ 'ಕರ್ನಾಟಕ ಏಕೀಕರಣದ ರೂವಾರಿ ನಾಡೋಜ ಪಾಟೀಲ ಪುಟ್ಟಪ್ಪ ಅವರು ಕನ್ನಡ ನಾಡು ನುಡಿಗೆ ನೀಡಿರುವ ಕೊಡುಗೆ ಅಪಾರ. ನೂರು ವರ್ಷದ ಸಾರ್ಥಕ ಬಾಳು ಬದುಕಿದ ಹಿರಿಯರಾದ ಪಾ.ಪು ಅವರಿಗೆ ನನ್ನ ಶ್ರದ್ಧಾಂಜಲಿ. ಹೋಗಿ ಬನ್ನಿ ಹಿರಿಯರೇ. ಕನ್ನಡಿಗರ ಮನದಲ್ಲಿ ನೀವೆಂದೂ ಅಮರ' ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಏಕೀಕರಣದ ರೂವಾರಿ ನಾಡೋಜ ಪಾಟೀಲ ಪುಟ್ಟಪ್ಪ ಅವರು ಕನ್ನಡ ನಾಡು ನುಡಿಗೆ ನೀಡಿರುವ ಕೊಡುಗೆ ಅಪಾರ. ನೂರು ವರ್ಷದ ಸಾರ್ಥಕ ಬಾಳು ಬದುಕಿದ ಹಿರಿಯರಾದ ಪಾ.ಪು ಅವರಿಗೆ ನನ್ನ ಶ್ರದ್ಧಾಂಜಲಿ. ಹೋಗಿ ಬನ್ನಿ ಹಿರಿಯರೇ. ಕನ್ನಡಿಗರ ಮನದಲ್ಲಿ ನೀವೆಂದೂ ಅಮರ. #PatilPuttappa #Kannadiga
— Sunil Joshi | ಸುನಿಲ್ ಜೋಶಿ (@SunilJoshi_Spin) March 17, 2020
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು 1940 ಮತ್ತು 1950 ರ ದಶಕದ ಅಂತ್ಯದಲ್ಲಿ ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅಷ್ಟೇ ಅಲ್ಲದೆ ಅವರು ರಾಜ್ಯಸಭೆಯಲ್ಲಿ ಎರಡು ಅವಧಿಗೆ ಕರ್ನಾಟಕವನ್ನು ಪ್ರತಿನಿಧಿಸಿದ್ದರು (1962 ರಿಂದ 1974). ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾದ ಶ್ರೇಯವೂ ಕೂಡ ಅವರಿಗೆ ಸಲ್ಲುತ್ತದೆ, ಕಾಲಾಂತರದಲ್ಲಿ ನಂತರ ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರುನಾಮಕರಣ ಮಾಡಲಾಯಿತು.2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪಾಟೀಲ ಪುಟ್ಟಪ್ಪನವರು 1949 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ವಿದೇಶದಲ್ಲಿ ಪತ್ರಿಕೋದ್ಯಮವೊಂದರಲ್ಲಿ ಪದವಿ ಪಡೆದ ಮೊದಲ ಕನ್ನಡಿಗ ಎನ್ನುವ ಹೆಗ್ಗಳಿಕೆಯೂ ಕೂಡ ಅವರಿಗಿದೆ.